ಬಲ್ಲಿರೇನಯ್ಯ? ತಾಳಮದ್ದಲೆಗೆ ನಾವೇ ಸರಿ ಎನ್ನುವ ನಾರಿಯರು
ಲೇಖಕರು : ಕನ್ನಡಪ್ರಭ
ಮ೦ಗಳವಾರ, ಜೂನ್ 25 , 2013
|
ಯಕ್ಷಗಾನದ ಪ್ರಮುಖ ವಿಭಾಗ ತಾಳಮದ್ದಲೆ. ಭಾಗವತಿಕೆ, ಹಿಮ್ಮೇಳ ಮತ್ತು ಲಯಬದ್ಧವಾದ ಮಾತುಗಾರಿಕೆಗಳು ಇದರ ಜೀವಾಳ. ಈ ಹಿಂದೆ ಪುರುಷರೇ ಸಕ್ರಿಯವಾಗಿ ತೊಡಗಿಕೊಂಡಿದ್ದ ತಾಳಮದ್ದಲೆ ಎಂಬ ಕಲಾರೂಪ ಇದೀಗ ಮಹಿಳೆಯರ ಪ್ರವೇಶದೊಂದಿಗೆ ವಿಭಿನ್ನ ಬೆಳವಣಿಗೆ ಕಂಡುಕೊಳ್ಳತೊಡಗಿದೆ.
ಹೀಗೆ ತಾಳಮದ್ದಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಕಲಾರಾಧನೆ ಮಾಡುತ್ತಿರುವ ಸಂಘಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಶ್ರೀ ಆಂಜನೇಯ ಮಹಿಳಾ ತಾಳಮದ್ದಲೆ ಸಂಘವೂ ಒಂದು. ಕಳೆದ 8 ವರ್ಷಗಳಿಂದ ತಾಳಮದ್ದಲೆಯಲ್ಲಿ ತನ್ನದೇ ಛಾಪು ಮೂಡಿಸಿರುವ ಈ ಸಂಘ, ಹಲವಾರು ಕಡೆ ಯಶಸ್ವಿ ಕಾರ್ಯಕ್ರಮಗಳನ್ನು ನೀಡಿದೆ.
|
ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ
|
ಪ್ರಸ್ತುತ ಸಂಘದಲ್ಲಿ ಗೃಹಿಣಿಯರಿಂದ ಹಿಡಿದು ಖಾಸಗಿ ಕಂಪನಿಗಳಲ್ಲಿರುವವರು, ಸ್ವ ಉದ್ಯೋಗಿಗಳು, ಲೇಖಕಿಯರು, ಉಪನ್ಯಾಸಕಿಯರೂ ಇದ್ದಾರೆ. 18 ಮಂದಿ ಸದಸ್ಯರಿರುವ ಸಂಘದ ಅಧ್ಯಕ್ಷೆಯಾಗಿ ಪ್ರೇಮಲತಾ ರಾವ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಸಂಘವನ್ನು ರೂಪಿಸಿ, ಅದರ ಬೆನ್ನೆಲುಬಾಗಿ ನಿಂತು ದುಡಿದದ್ದು ಯಕ್ಷಗಾನ ವೇಷಧಾರಿ ಪುತ್ತೂರಿನ ಭಾಸ್ಕರ ಭಾರ್ಯ ಅವರು.
'ಎಲ್ಲ ಮಹಿಳೆಯರಿಗೆ ಯಕ್ಷಗಾನದಲ್ಲಿ ಹೆಜ್ಜೆ ಹಾಕಲು ಸಾಧ್ಯವಿಲ್ಲ. ಹೀಗಿರುವಾಗ ಅವರಿಗೆ ತಾಳಮದ್ದಲೆ ಕಲಿಸಿದರೆ ಹೇಗೆ? ಎಂಬ ಯೋಚನೆ ಮನಸ್ಸಲ್ಲಿ ಮೂಡಿದ್ದೇ ತಡ ನಾನು ಕಾರ್ಯಪ್ರವೃತ್ತನಾದೆ. ಯಕ್ಷಗಾನದ ಆಸಕ್ತಿಯ ಜನರ ಜತೆ ಈ ವಿಷಯ ಪ್ರಸ್ತಾಪಿಸಿ ಅವರ ಮನೆಯ ಮಹಿಳೆಯರನ್ನೇ ತಾಳಮದ್ದಲೆಗೆ ಕರೆತರುವಲ್ಲಿ ಯಶಸ್ವಿಯಾದೆ. ದಶಕ ಹಿಂದೆ ಇದು ಅಷ್ಟೊಂದು ಸುಲಭ ಆಗಿರಲಿಲ್ಲ. ಯಾಕೆಂದರೆ ಮಹಿಳೆ ಇಂಥಾ ಕಲಾರೂಪದಲ್ಲಿ ಭಾಗವಹಿಸಬೇಕಾದರೆ ಅವಳಿಗೆ ಮನೆಯಿಂದ ಅಪ್ಪ ಅಥವಾ ಪತಿಯ ಪರವಾನಗಿ ಬೇಕಾಗಿತ್ತು' ಎನ್ನುತ್ತಾರೆ ಬಾರ್ಯ.
ಹೆಚ್ಚಿನವರು ಯಕ್ಷಗಾನದ ಹಿನ್ನೆಲೆ ಅರಿತವರಾದ್ದರಿಂದ ತಾಳಮದ್ದಲೆ ಕಲಿಯುವುದು ಕಷ್ಟವಾಗಲಿಲ್ಲ. ಪರಿಶುದ್ಧವಾದ ಭಾಷೆ, ಕಥಾನಕಗಳ ಬಗ್ಗೆ ಆಳವಾದ ಅರಿವು, ಸ್ಪಷ್ಟ ಮಾತುಗಾರಿಕೆ ಎಲ್ಲದರ ಬಗ್ಗೆಯೂ ಅವರಿಗೆ ತರಬೇತಿ ನೀಡಲಾಯಿತು. ಈ ಮಧ್ಯೆ, ಯಕ್ಷಗಾನದ ಗಂಧಗಾಳಿ ಗೊತ್ತಿಲ್ಲದವರನ್ನೂ ಸಂಘಕ್ಕೆ ಸೇರಿಸಿಕೊಂಡು ಅವರಿಗೆ ತರಬೇತಿ ನೀಡಲಾಯಿತು. ಪರಿಣಾಮ ಮಹಿಳೆಯರ ಸಂಖ್ಯೆ ಹೆಚ್ಚುತ್ತಾ ಹೋಯ್ತು. 15 ದಿನಕ್ಕೊಮ್ಮೆ ಆಂಜನೇಯ ಗುಡಿಯಲ್ಲಿ ಸೇರಿ ತಾಳಮದ್ದಲೆ ಪ್ರಾಕ್ಟೀಸ್ ಮಾಡಲಾಗುತ್ತದೆ. ಮಹಿಳೆಯರ ತಾಳಮದ್ದಲೆಗೆ ಒಳ್ಳೆ ಡಿಮಾಂಡ್ ಇರುವುದರಿಂದ ನಮ್ಮ ಸಂಘ ನಮ್ಮ ಜಿಲ್ಲೆ, ಕೇರಳ, ಧಾರವಾಡ, ಹೊರನಾಡುಗಳಲ್ಲಿ 100ಕ್ಕಿಂತಲೂ ಹೆಚ್ಚು ಕಾರ್ಯಕ್ರಮ ನೀಡಿವೆ. ಸಂಘ ಈಗ ಹೆಣ್ಮಕ್ಕಳಿಗೆ ಚೆಂಡೆ, ಮದ್ದಲೆ ಮತ್ತು ಭಾಗವತಿಕೆಯನ್ನೂ ಕಲಿಸಿಕೊಡುತ್ತಿದೆ.
ಪ್ರಸ್ತುತ ಮಹಿಳಾ ಅರ್ಥಧಾರಿಗಳಿಗೆ ಯಾವುದೇ ರೀತಿಯ ಸಂಭಾವನೆ ನೀಡುತ್ತಿಲ್ಲ. ಕಲೆಯನ್ನು ಬೆಳೆಸುವುದೇ ನಮ್ಮೆಲ್ಲರ ಉದ್ದೇಶ ಆಗಿರುವುದರಿಂದ ಎಲ್ಲರೂ ತಮ್ಮ ಸೇವೆಗಳಿಂದ ತೃಪ್ತರಾಗಿದ್ದಾರೆ.
- ಭಾಸ್ಕರ ಬಾರ್ಯ
ದೇವಸ್ಥಾನದಲ್ಲಿ ಪೂಜೆ, ಮದುವೆ ಸಮಾರಂಭಗಳಲ್ಲಿ ನಾವು ತಾಳಮದ್ದಲೆ ಪ್ರದರ್ಶನ ನೀಡುತ್ತೇವೆ. ಒಂದು ತಾಳಮದ್ದಲೆಯಲ್ಲಿ ಒಟ್ಟು ಐದಾರು ಜನ ಭಾಗವಹಿಸುತ್ತೇವೆ. ಮನೆಯಲ್ಲಿ ಮಕ್ಕಳ ಪರೀಕ್ಷೆ ಇರುವ ಸಂದರ್ಭ, ತಿಂಗಳ ಸಮಸ್ಯೆ ಇರುವಾಗ ಭಾಗವಹಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಪ್ರತಿ ಕಾರ್ಯಕ್ರಮದಲ್ಲೂ ಪಾತ್ರಗಳನ್ನು ಬದಲಿಸುತ್ತಾ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಲಾಗುತ್ತದೆ. ಮನೆಯ ಎಲ್ಲ ಕಾರ್ಯಗಳನ್ನು ನಿಭಾಯಿಸುವುದರ ಜತೆಗೆ ಕಲೆಗೆ ಪ್ರೋತ್ಸಾಹ ನೀಡುತ್ತಾ, ನಮಗೆ ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಮುನ್ನಡೆಯುತ್ತಿದ್ದೇವೆ.
- ಪ್ರೇಮಲತಾ ರಾವ್, ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ಅಧ್ಯಕ್ಷೆ
ಕೃಪೆ : http://www.kannadaprabha.com
|
|
|